Thursday, June 28, 2018

ಜೋಗಿಮಟ್ಟಿ - ಕರ್ನಾಟಕದ ಊಟಿ

ಜೋಗಿಮಟ್ಟಿ - ಕರ್ನಾಟಕದ ಊಟಿ
ಚಿತ್ರದುರ್ಗ ಎಂದಾಕ್ಷಣ ನಮಗೆ ನೆನಪಾಗುವುದು ಏಳು ಸುತ್ತಿನ ಕಲ್ಲಿನ ಕೋಟೆ, ಸುತ್ತಲೂ ಕಲ್ಲುಗಳಿಂದ ಕೂಡಿರುವ ಪ್ರದೇಶ , ಬಯಲು ಸೀಮೆಯ ಬೆಂಗಾಡು ಎಂದು .. ಆದರೆ ಇಲ್ಲೂ ಕೂಡ ಒಂದು ರಮಣೀಯವಾದ ಗಿರಿಧಾಮವಿದೆ, ಇದರ ಹೆಸರು ಜೋಗಿಮಟ್ಟಿ ಎಂದು, ಹಚ್ಚಹಸಿರಿನ ಸುಂದರ ಸ್ವಚ್ಛಂದ ಪರಿಸರ, ಅದ್ಭುತವಾದ ಜಾಗ, ಇದೊಂದು ರಕ್ಷಿತಾರಣ್ಯ ಪ್ರದೇಶ ಆದ ಕಾರಣ ಜನರಿಗೆ ಇದರ ಒಳಗೆ ಹೋಗಲು ಅರಣ್ಯಾಧಿಕಾರಿಗಳ ಅನುಮತಿ ಪತ್ರ ಬೇಕು.. ಇದು ಕರ್ನಾಟಕದ ಊಟಿ ಅಂತ ಕೂಡ ಕರೀತಾರಂತೆ...

ಈ ಸುಂದರ ಗಿರಿಧಾಮ ಚಿತ್ರದುರ್ಗದಿಂದ ಕೆಲವು ಕಿಲೋಮೀಟರ್ ಗಳ ದೂರದಲ್ಲಿದೆ ಇಲ್ಲಿಗೆ ಹೋಗಲು... ಚಿಕ್ಕದಾದ ರಸ್ತೆ ಕೂಡ ಇದೆ. ಸಮುದ್ರಮಟ್ಟದಿಂದ 3643 ಅಡಿ ಇರುವ ಈ ಪ್ರದೇಶವು ಸುಂದರ ಗಿರಿಧಾಮಗಳಲ್ಲಿ ಒಂದು, ಇದರ ರಮಣೀಯತೆ ಮುಂಗಾರಿನ ಮಳೆಯ ಕಾಲದಲ್ಲಿ ಅತಿ ಅದ್ಭುತವಾಗಿರುತ್ತದೆ, ಜೋರಾಗಿ ಬೀಸುವ ಗಾಳಿ, ಕ್ಷಣ ಕ್ಷಣಕ್ಕೂ ಬದಲಾಗುವ ವಾತಾವರಣ, ಮೋಡಗಳ ನಡುವೆಯೇ ಸಾಗುತ್ತಿರುವಂತೆ ಅನುಭವ, ಸುಮಾರು 150 ಕ್ಕೂ ಹೆಚ್ಚು ಪಕ್ಷಿಗಳಿಂದ ಪ್ರಬೇದದಿಂದ ಕೂಡಿರುವ ಚಿಲಿಪಿಲಿ ಕಲರವ.. ಈ ಜಾಗಕ್ಕೆ ಸಾಗುತ್ತಿದ್ದ ಹಾಗೆ ಹೆಚ್ಚಿನ ಸಂಖ್ಯೆಯಲ್ಲಿರುವ ನವಿಲುಗಳು ನಮ್ಮನ್ನು ಸ್ವಾಗತಿಸುತ್ತವೆ. ಮಳೆಗಾಲದಲ್ಲಿ ಹಾಗೂ ಮುಂಗಾರಿನಲ್ಲಿ ಇದೊಂದು ಅದ್ಭುತವಾದ ಪ್ರದೇಶ.

ತುಂತುರು ಮಳೆ ಗಳ ಜೊತೆಯಲ್ಲಿ, ಮೋಡಗಳ ಜೊತೆಯಲ್ಲಿ ,,,,ಬೆಳ್ಳಂಬೆಳಿಗ್ಗೆ ಕೆಲ ಹೊತ್ತು ಇಲ್ಲಿ ಕಳೆಯುವ ಅವಕಾಶ ಸಿಕ್ಕಿತ್ತು.... ವಾಹ್ ಎಂತಹ ಅನುಭವ ಅದು, ಕೆಲವೊಂದು ಸಾರಿ ಮೋಡಗಳು ಹಾಗೂ ಮಂಜು ಎಷ್ಟು ದಟ್ಟವಾಗಿತ್ತು ಎಂದರೆ ಹತ್ತು ಇಪ್ಪತ್ತು ಮೀಟರ್ ಮುಂದೆ ಇರುವ ಮನುಷ್ಯರು ಕೂಡ ಕಾಣಿಸುತ್ತಾ ಇರಲಿಲ್ಲ..

ಮಳೆಗಾಲದಲ್ಲಿ ಚಿತ್ರದುರ್ಗಕ್ಕೆ ಹೋದರೆ ಖಂಡಿತ ಇಲ್ಲಿಗೆ ಹೋಗಿ ಬನ್ನಿ ಆದರೆ ಪರಿಸರಕ್ಕೆ ಮಾತ್ರ ಹಾನಿ ಮಾಡಬೇಡಿ










ರಸ್ತೆಗಳು --- ಬದುಕಿನ ಪಯಣವೂ

ರಸ್ತೆಗಳು --- ಬದುಕಿನ ಪಯಣವೂ 

ನನಗೊಂದು ಹುಚ್ಚು ಆಸೆ... ದಾರಿಯಲ್ಲಿ ಹೋಗುತ್ತಿರುವಾಗ ಅಥವಾ ಎಲ್ಲಾದರೂ ಪ್ರವಾಸಕ್ಕೆ ಹೋಗಿದ್ದಾಗ ದಾರಿ ಉದ್ದಕ್ಕೂ ಕಾಣಸಿಗುವ ರಸ್ತೆಗಳನ್ನು ಫೋಟೋ ತೆಗೆಯುವ ಆಸೆ, ಅದೆಷ್ಟು ಫೋಟೋಗಳನ್ನು ತೆಗೆದಿದ್ದೇನೋ ಹೀಗೆ...

ನಮ್ಮ ಬದುಕಿನ ಪಯಣ ಕೂಡ ರಸ್ತೆಯ ರೀತಿಯಲ್ಲಿ ಸಾಗುವುದು, ಒಂದೊಂದು ರೀತಿ, ಒಂದೊಂದು ತರ, ಒಂದೊಂದು ಕಾಲದಲ್ಲಿ ಸನ್ನಿವೇಶಗಳಿಗೆ ತಕ್ಕಂತೆ ನಮ್ಮ ಬದುಕಿನ ಪಯಣದಲ್ಲಿ ನಾವು ಒಗ್ಗಿ ಕೊಳ್ಳಬೇಕು.. ರಸ್ತೆಗಳು ಚೆನ್ನಾಗಿದೆ ಅಂತ ತುಂಬಾ ಜೋರಾಗಿ ಹೊರಟರೆ ಅಪಾಯ ಕಾದಿಟ್ಟ ಬುತ್ತಿ ... ನಮ್ಮ ಬದುಕಿನ ಪಯಣದಲ್ಲಿ ಈ ರಸ್ತೆಗಳಲ್ಲಿ ಕಾಣಸಿಗುವ ಸೌಂದರ್ಯವನ್ನು ಆಸ್ವಾದಿಸುತ್ತಾ ದಾರಿ ಮಧ್ಯದಲ್ಲಿ ಸಿಕ್ಕ ಸಣ್ಣಪುಟ್ಟ ಸಂತೋಷಗಳನ್ನು ಆನಂದಿಸುತ್ತಾ ನಮ್ಮ ಗುರಿಯ ಕಡೆಗೆ ಸಾಗಬೇಕು... ರಸ್ತೆಗಳು ಹಾಗೂ ಬದುಕಿನ ಪಯಣದ ದಾರಿ ಒಂದೇ ... ಗುರಿ ಇದ್ದರೆ ಅದಕ್ಕೆ ತಕ್ಕುದಾದ ಪ್ರಯತ್ನವಿದ್ದರೆ ಗುರಿಯನ್ನು ಸುಲಭವಾಗಿ ತಲುಪಬಹುದು

ಒಂದೊಂದು ಋತುವಿನಲ್ಲೂ ಒಂದೊಂದು ರೀತಿ ಕಾಣುತ್ತದೆ ನಮ್ಮ ರಸ್ತೆಗಳು. ಮಳೆಗಾಲದಲ್ಲಿ ಹಸಿರು ಸಿರಿ ಗಳ ಮಧ್ಯೆ ಸೀಳಿಕೊಂಡು ಹೋಗಿರುವ ಕಪ್ಪು ಬಣ್ಣದ ಗೆರೆಯಂತೆ, ಬೇಸಿಗೆ ಕಾಲದಲ್ಲಿ ಅಕ್ಕಪಕ್ಕ ಒಣಗಿ ಹೋಗಿರುವ ಹುಲ್ಲುಗಳ ನಡುವೆ, ಮರ ಗಿಡಗಳ ನಡುವೆ ಕಪ್ಪಗೆ ಮಲಗಿಕೊಂಡು, ಬಿಸಿಲ ಹೊಡೆತಕ್ಕೆ ಮಿರಿಮಿರಿ ಮಿನುಗುತ್ತಾ ಇರುವ ರಸ್ತೆಗಳು. ಹಾಗೆ ಚಳಿಗಾಲದಲ್ಲಿ ಮುಂಜಾವಿನ ಸಮಯದಲ್ಲಿ ದಟ್ಟ ಮಂಜಿನ ಒಳಗಡೆ ಹುದುಗಿ ಹೋಗಿರುವ ಮಬ್ಬು ಮಬ್ಬಾಗಿರುವ ರಸ್ತೆಗಳು... ಒಟ್ಟಿನಲ್ಲಿ ಒಂದೊಂದು ಋತುವಿನಲ್ಲೂ ಒಂದೊಂದು ರೀತಿ ಕಾಣುವ, ಹಾಗೆ ಬದುಕಿನ ಪಯಣದ ಹಾದಿ ನೆನಪಿಸುವ ಚಿಕ್ಕ, ದೊಡ್ಡ ರಸ್ತೆಗಳು ಅದ್ಭುತವಾದ ಆನಂದವನ್ನು ಕೊಡುತ್ತದೆ... ಈ ನಡುವೆ ನಮ್ಮ ಕರ್ನಾಟಕದ ರಸ್ತೆಗಳು ಕೂಡ ಅತಿ ಸುಂದರವಾಗಿ ನಾಜೂಕಾಗಿ ನಿರ್ಮಾಣಗೊಂಡಿದೆ, ದೊಡ್ಡ ದೊಡ್ಡ ಹೆದ್ದಾರಿಗಳಲ್ಲಿ ಇಂತಹಾ ರಸ್ತೆಗಳ ಮೇಲೆ ಹೋಗುವುದೇ ಒಂದು ಆನಂದ... ಅದೇ ರೀತಿ ಪರಿಸರಕ್ಕೆ ಹಾನಿಯಾಗದೆ ರೀತಿ ನೋಡಿಕೊಳ್ಳಬೇಕಾದದ್ದು ಕೂಡ ನಮ್ಮ ಕರ್ತವ್ಯ.



ಕರ್ನಾಟಕದ ಕೆಲವೊಂದು ರಸ್ತೆಗಳ ಫೋಟೋಗಳು......


















Saturday, June 23, 2018

ಸಾರ್ಥಕತೆಯ ಭಾವ





ಸಾರ್ಥಕತೆಯ ಭಾವ ....




ಪ್ರತಿವರ್ಷದಂತೆ ಈ ವರ್ಷವೂ ಕೂಡ ನಾವು ನಮ್ಮ ಕನ್ನಡ ರಾಜ್ಯೋತ್ಸವದ ಅಂಗವಾಗಿ ,ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಕ್ರೂಡೀಕೃತ ವಾದ ಹಣದಲ್ಲಿ ಒಂದು ಭಾಗವನ್ನು ಸದುದ್ದೇಶದಿಂದ ಬಳಸಬೇಕೆಂದು ತೀರ್ಮಾನಿಸಿದ್ದೆವು , ಅದರಲ್ಲಿ ಸ್ವಲ್ಪ ಹಣವನ್ನು ಕರ್ನಾಟಕದ ಕಲೆ ಮತ್ತು ಸಂಸ್ಕೃತಿ ಇದರ ಬಗ್ಗೆ ಹಾಗೂ ಇದಕ್ಕೋಸ್ಕರ ತಮ್ಮ ಜೀವನವನ್ನು ಮುಡಿಪಾಗಿಟ್ಟ, ಕಲೆಯನ್ನು ಬೆಳೆಸಿ ಮುತ್ತು ಉಳಿಸುತ್ತಿರುವ ಕಲಾವಿದರಿಗೆ ಕೊಡಬೇಕೆಂದು ತೀರ್ಮಾನ ಮಾಡಿ, ಐವತ್ತು ಸಾವಿರ ರೂಪಾಯಿಗಳನ್ನು "ಜವರಯ್ಯ ಮತ್ತು ಬೋರಮ್ಮ " ಎಂಬ ಜಾನಪದ ಕಲಾವಿದರಿಗೆ ಕೊಟ್ಟಿದ್ದಾಯ್ತು, ಇನ್ನು ಉಳಿದ ಸ್ವಲ್ಪ ಹಣವನ್ನು ಕರ್ನಾಟಕ ಚಿತ್ರರಂಗದ ಹೆಸರಾಂತ ಪೋಷಕ ನಟರಾದ ಸುಮಾರು 600 ಚಿತ್ರಗಳಲ್ಲಿ ನಟಿಸಿರುವ ಸತ್ಯಜಿತ್ ಎಂಬುವರಿಗೆ ಕೊಡಲಾಗಿತ್ತು, ಕೆಲವೊಂದು ನ್ಯೂಸ್ ನಲ್ಲಿ ನೋಡಿದ್ದೆವು ಸತ್ಯಜಿತ್ ಅವರು ಗ್ಯಾಂಗ್ರಿನ್ ನಿಂದಾಗಿ ಒಂದು ಕಾಲನ್ನು ಕಳೆದುಕೊಂಡು ಸಂಕಟ ಅನುಭವಿಸುತ್ತಿದ್ದಾರೆ ಎಂದು , ಆದ ಕಾರಣದಿಂದ ನಮ್ಮ ಕನ್ನಡ ರಾಜ್ಯೋತ್ಸವ ದಲ್ಲಿ ಬಂದ ಸ್ವಲ್ಪ ಹಣವನ್ನು ಇವರಿಗೆ ನಮ್ಮ ಕಡೆಯಿಂದ ಸ್ವಲ್ಪ ಸಹಾಯವಾಗಲಿ ಎಂದು ಕೊಟ್ಟಿದ್ದೇವೆ .

ಇನ್ನು ಉಳಿದ ಸ್ವಲ್ಪ ಹಣದಲ್ಲಿ ಏನ್ ಮಾಡಬೇಕು ಎಂದು ಯೋಚಿಸುತ್ತಿರುವಾಗ ನಮ್ಮ ಕಂಪನಿಯ ಸಹದ್ಯೋಗಿ ಶೀಲಾ ಅವರು ಒಂದು ಸಲಹೆ ನೀಡಿದರು ದೂರದ ಹಳ್ಳಿಗಳಲ್ಲಿ ಇರುವ ಸರ್ಕಾರಿ ಸ್ಕೂಲುಗಳಲ್ಲಿ ಕಂಪ್ಯೂಟರ್ ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಬೇಕಾಗುವ ಆಟ ಸಾಮಾನುಗಳು ಅದೇ ರೀತಿ ಕೆಲವೊಂದು ಅತಿ ಅವಶ್ಯಕವಾಗಿ ಇರುವ ವಸ್ತುಗಳನ್ನು ಏಕೆ ಕೊಡಬಾರದು ಎಂದು..... ಸರಿ ಇದು ಒಳ್ಳೆ ಯೋಚನೆಯೇ ಹಾಗೆ ಮಾಡೋಣ ಎಂದು ತೀರ್ಮಾನಿಸಿ ಯಾವ ಸರ್ಕಾರಿ ಶಾಲೆಗೆ ಕೊಡಬೇಕು ಎಂದು ಯೋಚಿಸುತ್ತಿರುವಾಗ, ಶೀಲಾ ಮತ್ತು ಅವರ ಕುಟುಂಬದವರು ಹೋದ ವರ್ಷ ಅವರ ತವರಾದ ಚಿತ್ರದುರ್ಗದಲ್ಲಿ ಒಂದು ಸರ್ಕಾರಿ ಶಾಲೆಗೆ ಸಮವಸ್ತ್ರ ಹಾಗೂ ಪುಸ್ತಕಗಳನ್ನು ಕೊಟ್ಟಿದ್ದರು. ಅಲ್ಲಿಗೆ ಕಂಪ್ಯೂಟರ್ ಹಾಗೂ ಕ್ರೀಡಾ ಸಾಮಗ್ರಿಗಳ ಅಗತ್ಯವಿದ್ದು, ಅಲ್ಲಿಗೆ ಕೊಟ್ಟರೇ ಹೇಗೆ ಎಂದು ಸಲಹೆ ಬಂತು... ಸರಿ ಎಲ್ಲರೂ ಒಮ್ಮತದಿಂದ ಚಿತ್ರದುರ್ಗದಲ್ಲಿರುವ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ಹಾಗೂ ಅಲ್ಲೇ ಹತ್ತಿರದಲ್ಲಿ ಒಂದು ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿ ಇರುವ ಹಳ್ಳಿಯಲ್ಲಿ ಇನ್ನೊಂದು ಸರ್ಕಾರಿ ಶಾಲೆಯನ್ನು ಆಯ್ದುಕೊಂಡೆವು , ನಮ್ಮ ಉದ್ದೇಶ ಇಷ್ಟೇ ಒಟ್ಟಿನಲ್ಲಿ ಸಂಗ್ರಹ ಸಂಗ್ರಹವಾದ ಹಣವನ್ನು ಒಳ್ಳೆಯ ಉದ್ದೇಶದಿಂದ ಒಳ್ಳೆ ಕಾರ್ಯಕ್ಕಾಗಿ ಒಂದಷ್ಟು ಜನರ ಉಪಯೋಗಕ್ಕೆ ಉಪಯೋಗಿಸಬೇಕು ಎಂದು.

ಬೆಂಗಳೂರಿನ ಸುತ್ತಮುತ್ತ ಇರುವ ಸರ್ಕಾರಿ ಕಾಲೇಜು ಅಥವಾ ಸ್ಕೂಲ್ ಇವರಿಗೆ ನೆರವಿನ ಹಸ್ತ ಯಾವಾಗಲೂ ಇರುತ್ತೆ ,ಅದೇ ಸ್ವಲ್ಪ ದೂರದ ಊರಿನಲ್ಲಿ, ತುಂಬಾ ಹಳ್ಳಿಗಾಡು ಪ್ರದೇಶದಲ್ಲಿ ಇರುವ ಸರ್ಕಾರಿ ಶಾಲೆಗಳು ಅವಕಾಶ ವಂಚಿತರಾಗಿರುತ್ತಾರೆ ಆದ ಕಾರಣ ನಾವು ಚಿತ್ರದುರ್ಗ ಜಿಲ್ಲೆಯ ಎರಡು ಶಾಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು.

ಸರಿ ಅಂದುಕೊಂಡ ಹಾಗೆ 3 ಕಂಪ್ಯೂಟರ್ಗಳನ್ನು ಬೆಂಗಳೂರಿನ ಎಸ್ ಪಿ ರೋಡಿನಲ್ಲಿ ತೆಗೆದುಕೊಂಡಾಗಿತ್ತು , ಇದೊಂದು ಒಳ್ಳೆ ಉದ್ದೇಶ ಎಂದು ಇನ್ನು ಕೆಲವು ನಮ್ಮ ಸ್ನೇಹಿತರು ಜೊತೆ ಸೇರಿ ಎರಡು ಶಾಲೆಗಳಿಗೆ ಬೇಕಾಗುವ ಕೆಲವೊಂದು ಕ್ರೀಡಾ ಸಾಮಗ್ರಿಗಳನ್ನು, ಬ್ಯಾಟ್ಮಿಟನ್, football, volleyball, ಹೀಗೆ ಕೆಲವೊಂದು ಆಟ ಸಾಮಗ್ರಿಗಳನ್ನು ತೆಗೆದುಕೊಂಡರು. ಎಲ್ಲಾ ಆದ ಮೇಲೆ ಜೂನ್ 9 ಮತ್ತು 10 ನೇ ತಾರೀಖಿನಂದು ಚಿತ್ರದುರ್ಗ ಅಲ್ಲಿಗೆ ಹೋಗಿ, ಇವುಗಳನ್ನು ಶಾಲೆಗೆ ಕೊಡಬೇಕೆಂದು ತೀರ್ಮಾನ ಕೂಡ ಆಯಿತು.... ಇದರ ಜೊತೆಯಲ್ಲಿ ನಮ್ಮ ಕಂಪನಿಯ ಸಹೋದ್ಯೋಗಿ ಮಹೇಂದ್ರ ಎನ್ನುವವರ ಸ್ನೇಹಿತರು ಇಷ್ಟು ಒಳ್ಳೆ ಕಾರ್ಯ ಮಾಡುತ್ತಿದ್ದೀರಾ.. ಹೇಗೂ ಇವಾಗ ಸ್ಕೂಲ್ ಶುರುವಾಗಿದೆ , ನಮ್ಮ ಕಡೆಯಿಂದ ಪುಸ್ತಕ ಪೆನ್ನು ಪೆನ್ಸಿಲ್ ಅನ್ನು ನೀಡುತ್ತೇವೆ ಎಂದು ಮುಂದೆ ಬಂದರು. ಸರಿ ಒಳ್ಳೆಯದೇ ಆಯಿತು ಎಂದು ಅಂದುಕೊಂಡ ದಿನ ಅಂದರೆ ಜೂನ್ 9 ಬೆಳಿಗ್ಗೆ ಐದು ಗಂಟೆಗೆ ನಮ್ಮ 15 ಜನರ ತಂಡ ಬೆಂಗಳೂರಿನಿಂದ ಚಿತ್ರದುರ್ಗದ ಕಡೆಗೆ ಪ್ರಯಾಣ ಹೊರಟಿತು, ಹೊರಡುವ ದಿನ ಸಣ್ಣದಾದ ಜಿಟಿಜಿಟಿ ಮಳೆ ,ಮುಂಗಾರು ಶುರುವಾದ್ದರಿಂದ ಮಳೆ ಶುರುವಾಗಿತ್ತು, ಅಂದು ಶನಿವಾರ ಆದ್ದರಿಂದ ಶಾಲಾ ಮಕ್ಕಳು ನಮ್ಮ ಬರುವಿಕೆಯನ್ನು ಎದುರು ನೋಡುತ್ತಿದ್ದರು ನಾವೆಲ್ಲಾ ಸೇರಿ ಶಾಲೆಗೆ ಹೋಗುವಷ್ಟರಲ್ಲಿ ಹತ್ತು ಗಂಟೆ ಆಗಿತ್ತು , ಆ ಸಣ್ಣದಾಗಿ ಬೀಳುತ್ತಿರುವ ಜಟಿ ಜಟಿ ಮಳೆಯಲ್ಲೂ ವಿದ್ಯಾರ್ಥಿಗಳ ಉತ್ಸಾಹ ಕಿಂಚಿತ್ತು ಕಮ್ಮಿ ಆಗಿರಲಿಲ್ಲ .... ಆ ಶಾಲೆಯ ಉಪಾಧ್ಯ ವೃಂದ ಒಂದು ಸಣ್ಣ ಕಾರ್ಯಕ್ರಮವನ್ನು ಏರ್ಪಡಿಸಿ, ಬೆಳಗಿನ ಉಪಹಾರದ ವ್ಯವಸ್ಥೆಯನ್ನು ಕೂಡ ಮಾಡಿದ್ದರು.. ಸಣ್ಣದಾಗಿ ಬಿಟ್ಟು ಬಿಟ್ಟು ಬರುತ್ತಿರುವ ಮಳೆಯಲ್ಲಿ ಎಲ್ಲಾ ಮಕ್ಕಳು ಕೂತಿದ್ದರು ಇಂತಹ ಉತ್ಸಾಹ ಆ ಮಕ್ಕಳಲ್ಲಿ ಹಾಗು ಶಾಲೆಯ ಉಪಾಧ್ಯಾಯರಿಗೂ ಕೂಡ ನಾವಿಲ್ಲಿ ಕಂಪ್ಯೂಟರ್ ಕೊಡುತ್ತಿರುವ ವಿಷಯ ತುಂಬಾ ಸಂತೋಷ ತಂದಿತ್ತು. ಕಂಪ್ಯೂಟರ್ ಅನ್ನು ಇಡುವುದಕ್ಕಾಗಿ ಒಂದು ರೂಮಿನಲ್ಲಿ ಅಚ್ಚುಕಟ್ಟಾದ ಜಾಗವನ್ನು ರೆಡಿ ಮಾಡಿಕೊಂಡಿದ್ದರು, ಅಂತರ ಒಂದು ಸಣ್ಣ ಕಾರ್ಯಕ್ರಮ, ಶಾಲೆಯ ಮುಖ್ಯೋಪಾಧ್ಯಾಯರು ,ಆಡಳಿತ ಮಂಡಳಿ ಕೆಲವೊಂದು ಮಾತುಗಳನ್ನಾಡಿ ನಮ್ಮ ಕಾರ್ಯವನ್ನು ಶ್ಲಾಘಿಸಿ.. ಚಿಕ್ಕ ಮಕ್ಕಳೆಲ್ಲರೂ ಇದರ ಉಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು ... ಅಲ್ಲಿಗೆ ಬರುತ್ತಿರುವ ಮಕ್ಕಳೆಲ್ಲರೂ ಸ್ಲಮ್ ಹಾಗೂ ಅತಿ ಹಿಂದುಳಿದ ರೈತರ ಹಾಗೂ ಬಡವರ ಮಕ್ಕಳಾಗಿದ್ದರು... ನಮ್ಮ ಮಕ್ಕಳಿಗೆ ಕಂಪ್ಯೂಟರ್ ಲ್ಯಾಪ್ಟಾಪ್ ಎಂದರೆ ಎಲ್ಲಾ ಗೊತ್ತಿರುತ್ತದೆ ಆದರೆ ಆ ಮಕ್ಕಳು ಕಂಪ್ಯೂಟರ್ ನೋಡಿದ್ದೇ ಒಂದು ಖುಷಿ , ಆ ಖುಷಿಯನ್ನು ಅವರ ಕಣ್ಣುಗಳಲ್ಲಿ ನೋಡಬೇಕಿತ್ತು ಎಂತಾ ಆನಂದ!!!!! ಅದೇ ರೀತಿ ನಾವು ತಂದಿದ್ದ ಪುಸ್ತಕ ಹಾಗೂ ಕ್ರೀಡೆಯ ಆಟ ಸಾಮಾನುಗಳನ್ನು ಅಲ್ಲೇ ಎಲ್ಲರಿಗೂ ಹಂಚಿದೆವು ಆಗ ನೋಡಬೇಕಿತ್ತು ಅವರ ಆನಂದ !!!! ಒಂದು ಪುಸ್ತಕ ಒಂದು ಪೆನ್ಸಿಲ್ ರಬ್ಬರ್ ಸಿಕ್ಕಿದೆ ಎಂದು ದೊಡ್ಡ ವಿಷಯವಾಗಿತ್ತು .... ಸರಿ ಅಲ್ಲಿನ ಸ್ಕೂಲ್ ಇನ್ ಅವರ ಜೊತೆ ಸ್ವಲ್ಪ ಹೊತ್ತು ಕಳೆದು ಕಂಪ್ಯೂಟರನ್ನು ಜೋಡಿಸಿಕೊಟ್ಟು ಅದನ್ನು ಹೇಗೆ ಉಪಯೋಗಿಸಬೇಕು ಎಂದು ಹೇಳಿ ಅವರ ಜೊತೆ ಸ್ವಲ್ಪ ಹೊತ್ತು ಕಳೆದು ಇನ್ನೊಂದು ಪುಟ್ಟ ಹಳ್ಳಿಯ ಕಡೆ ನಮ್ಮ ಪಯಣ ಹೊರಟಿತು....




ಸಣ್ಣಗೆ ಸುರಿಯುತ್ತಿರುವ ಮಳೆಯಲ್ಲೂ ಕುಳಿತಿರುವ ಮಕ್ಕಳು 


ಶಾಲೆಯ ಮುಖ್ಯೋಪಾಧ್ಯಾಯರಿಂದ ಸಣ್ಣ ಭಾಷಣ 



ನಮ್ಮ ಕಂಪನಿಯ ಸಹದ್ಯೋಗಿ ಮಿತ್ರ ವೃಂದ 








ನಾವು ಕೊಟ್ಟ ಕಂಪ್ಯೂಟರ್ ಅನ್ನು ಉದ್ಘಾಟನೆ ಮಾಡುತ್ತಿರುವುದು 









ಚಿಕ್ಕ ಮಕ್ಕಳಿಂದ ದೇವರ ಹಾಡು......







ಪುಸ್ತಕ ಹಾಗು ಪೆನ್ಸಿಲ್ , ವಿತರಣೆ 








ಚಿಕ್ಕ ಮಕ್ಕಳ ಸಂತೋಷ ನೋಡಿ....





ಸಣ್ಣ ಮಳೆಯಲ್ಲೂ ಯಶಸ್ಹ್ವಿ ಅದ ನಮ್ಮ ಕಾರ್ಯಕ್ರಮ 














ನಮ್ಮ ಕಂಪನಿ ಸಹದ್ಯೋಗಿ ಮಿತ್ರರು.... 
















ಚಿತ್ರದುರ್ಗದಿಂದ ಒಂದಿಪ್ಪತ್ತು ಕಿಲೋಮೀಟರ್ ದೂರದಲ್ಲಿರುವ "ಚಿಕ್ಕ ರ ಗೊಲ್ಲ ಹಟ್ಟಿ "ಅಲ್ಲಿ ಒಂದು ಸ್ಕೂಲನ್ನು ಆಯ್ಕೆಮಾಡಿಕೊಂಡಿದ್ದು ಅಲ್ಲಿಗೆ ಹೋಗುವಷ್ಟರಲ್ಲಿ ಹನ್ನೆರಡು ಗಂಟೆ ಆಗಿತ್ತು ಅಲ್ಲೂ ಕೂಡ ಶಾಲಾ ಮಕ್ಕಳು ಹಾಗೂ ಅಧ್ಯಾಪಕ ವರ್ಗದವರು ನಮ್ಮ ಬರುವಿಕೆಗಾಗಿ ಕಾಯುತ್ತಿದ್ದರು, ಅಲ್ಲಿ ಕೂಡ ತುಂಬಾ ಮಳೆ ಪಾಪ ಅವರು ಕಾರ್ಯಕ್ರಮಕ್ಕೋಸ್ಕರ ಶಾಲಾ ಆವರಣದ ಮುಂಬಾಗ ಚೇರುಗಳನ್ನು ಹಾಕಿಸಿ ಕಾಯುತ್ತಿದ್ದರು ಆದರೆ ಮಳೆ ಅದಕ್ಕೆ ಆಸ್ಪದ ಕೊಡಲಿಲ್ಲ ...!! ಸರಿ ಎಂದು ಶಾಲೆಯ ಆವರಣದ ಒಳಗಡೆ ಇರುವ ಒಂದು ಪುಟ್ಟ ಕೊಠಡಿಯಲ್ಲಿ ಒಂದನೇ ತರಗತಿಯಿಂದ ಏಳನೇ ತರಗತಿಯ ವಿದ್ಯಾರ್ಥಿಗಳನ್ನು ಕೂಡಿಸಿ ಅವರಿಗೆ ಸ್ವಲ್ಪ ಸಣ್ಣಪುಟ್ಟ ಆಟಗಳನ್ನು ಆಡಿಸಿ ಕಂಪ್ಯೂಟರ್ ಹಾಗೂ ತಂದಿದ್ದ ಪುಸ್ತಕ ಪೆನ್ನು ಪೆನ್ಸಿಲು ಗಳನ್ನು ಕೊಟ್ಟೆವು ಇಲ್ಲೂ ಕೂಡ ಆ ಪುಟ್ಟ ವಿದ್ಯಾರ್ಥಿಗಳಿಗೆ ಏನೂ ದೊಡ್ಡ ವಸ್ತು ಸಿಕ್ಕ ಖುಷಿ ಸಂಭ್ರಮ, ಆ ಒಂದು ಪುಸ್ತಕ ಪೆನ್ಸಿಲು ಅವರ ಮುಖದಲ್ಲಿ ಆ ರೀತಿಯ ಆನಂದವನ್ನುಂಟು ಮಾಡುತ್ತೆ ಎಂದು ನಾವು ನೋಡಿರಲಿಲ್ಲ ಒಬ್ಬೊಬ್ಬರಲ್ಲೂ ಒಂದೊಂದು ರೀತಿಯ ಸಂತೋಷ ನನಗೆ ಈ ಕಲರ್ ಸಿಕ್ಕಿದೆ ಇನ್ನೊಂದು ಕಲರ್ ಸಿಕ್ಕಿದೆ ಎಂದು ಅವರವರೇ ಮಾತನಾಡಿಕೊಂಡು ಎಲ್ಲರಿಗೂ ತೋರಿಸುತ್ತಾ ಖುಷಿಪಡುತ್ತಿದ್ದರು... ಅದನ್ನು ನೋಡಿ ನಮ್ಮ ಕಣ್ಣುಗಳು ತೇವವಾದವು ..... ಇಲ್ಲಿ ಮಾಡಿದ ಇನ್ನೊಂದು ಒಳ್ಳೆಯ ಕೆಲಸವೆಂದರೆ 10 ಸಸಿಗಳನ್ನು ತೆಗೆದುಕೊಂಡು ಹೋಗಿದ್ದೆವು ನೇರಳೆ ಮರ, ಹೊಂಗೆ ಮರ, ಕಾಡು ಬಾದಾಮಿ, ಹೀಗೆ ಕೆಲವೊಂದು ಒಳ್ಳೆಯ ಸಸ್ಯಗಳನ್ನು ನೆಡುವ ಕಾರ್ಯಕ್ರಮ ಕೂಡ.. ಅದನ್ನು ಶಾಲಾ ಆವರಣದಲ್ಲಿ ನಮ್ಮ ಸಹೋದ್ಯೋಗಿ ಮಿತ್ರರು ಎಲ್ಲರೂ ಸೇರಿ ಆ ಸಸಿಗಳನ್ನು ನೆಟ್ಟು ಮತ್ತೆ ಬಂದಾಗ ಇದು ದೊಡ್ಡ ಮರವಾಗಿ ಇರಬೇಕು ಎಂದು ಹೇಳಿ ಹೊರಟೆವು. ಅಲ್ಲಿನ ಶಾಲೆಯ ವತಿಯಿಂದ ನಮಗಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು ಸರ್ಕಾರಿ ಶಾಲೆಗಳಲ್ಲಿ ಸಿಗುವ ಮಧ್ಯಾಹ್ನದ ಊಟವೇ ನಮಗೂ ಇತ್ತು ತುಂಬಾ ಮುತುವರ್ಜಿ ವಹಿಸಿ ಅಚ್ಚುಕಟ್ಟಾಗಿ ವ್ಯವಸ್ಥೆಯನ್ನು ಮಾಡಿದ್ದರು ಸರಿ ಎಲ್ಲರದು ಊಟ ಮಾಡಿ ಆಯಿತು ಹಾಗೇ ಸ್ವಲ್ಪ ಹೊತ್ತು ಅಲ್ಲೇ ಇದ್ದ ಚಿಕ್ಕ ಮೈದಾನದಲ್ಲಿ ನಮ್ಮ ಜೊತೆ ಬಂದಿದ್ದ ನಮ್ಮ ಸಹೋದ್ಯೋಗಿ ಮಿತ್ರರು ಹಳ್ಳಿ ಮಕ್ಕಳ ಜೊತೆ ಸೇರಿ ಸ್ವಲ್ಪ ಹೊತ್ತು ಕಬಡ್ಡಿ ಆಟ ಹಾಗೂ ಕೆಲವೊಂದು ಸಣ್ಣಪುಟ್ಟ ಆಟವನ್ನು ಆಡಿದೆವು... ಅಲ್ಲಿಂದ ಎಲ್ಲರನ್ನು ಬೀಳ್ಕೊಟ್ಟು ಹೊರಟಾಗ 3.0 ಘಂಟೆ ಆಗಿತ್ತು... ಅಲ್ಲಿಂದ ನೇರವಾಗಿ ಚಿತ್ರದುರ್ಗದ ವೀರ ಮದಕರಿ ನಾಯಕರ ಕಲ್ಲಿನ ಕೋಟೆಯೊಳಗೆ ಪ್ರವೇಶ ಮಾಡಿದೆವು ಒಟ್ಟಿನಲ್ಲಿ ಆ ಚಿಕ್ಕ ಚಿಕ್ಕ ಮಕ್ಕಳ ಮುಖದಲ್ಲಿ ನೋಡಿದ ಆನಂದವು ನಾವು ಬೆಂಗಳೂರಿನಿಂದ ಇಲ್ಲಿ ತನಕ ಬಂದಿದ್ದು ಸಾರ್ಥಕ ಎನಿಸಿತು.. ಹಾಗೆ ಒಂದು ಒಳ್ಳೆಯ ಕಾರ್ಯದಲ್ಲಿ ಕೈಜೋಡಿಸಿದ ಅನುಭವ ನಮ್ಮ 15 ಜನರ ತಂಡದಲ್ಲಿ ಮೂಡಿತ್ತು ....

ನಮ್ಮ ತಂಡದ ಸದಸ್ಯರು ಶೀಲಾ ಮತ್ತು ಶಿಲ್ಪ ಹಾಗೂ ಇವರ ಕುಟುಂಬದವರ ಸಹಕಾರ ಯಾವಾಗಲೂ ನೆನೆಯಬೇಕು.. ಅಂತಹ ಒಳ್ಳೆಯ ಸಹಕಾರವನ್ನು ಕುಟುಂಬದವರು ನಮಗೆಲ್ಲರಿಗೂ ಕಲ್ಪಿಸಿದ್ದರು ಇವರಿಗೆ ನಾವು ಯಾವಾಗಲೂ ಚಿರಋಣಿಯಾಗಿರುತ್ತೇವೆ..

ಸೂರಜ್, ಸುಮತಿ, ವಿಜಯ್, ಮಹೇಂದ್ರ ,ಅನಂತಶಯನ, ಉಮೇಶ್, ಗಂಗಾಧರ್ ಹಾಗು ಅವರ ಪತ್ನಿ ಸುಷ್ಮಾ ಹಾಗೆ ಮಹೇಂದ್ರ ಅವರ ಫ್ರೆಂಡ್ಸ್ ಎಲ್ಲರಿಗೂ ನನ್ನ ನಮನಗಳು.

ಒಂದು ಒಳ್ಳೆಯ ಕೆಲಸದಲ್ಲಿ ಭಾಗಿಯಾದ ಅನುಭವ ನಮ್ಮ ಗುಂಪಿನ ಸದಸ್ಯರು ತುಂಬ ಕುಷಿ ಪಟ್ಟರು.... ಇಂಥದ ಹತ್ತಾರು ಕಾರ್ಯಕ್ರಮಗಳು ಹೀಗೆ ನಡೆಯಲಿ ಎಂಬುದೇ ನಮ್ಮ ಎಲ್ಲರ ಆಶಯ..... 




















































































ಶಾಲೆಯ ಮಕ್ಕಳ ಜೊತೆ ನಾವು ಮಕ್ಕಳಾದ ಸಂಧರ್ಬ .



ಒಂದು ಚಿಕ್ಕ ಪುಸ್ತಕ, ಪೆನ್ನು ಪೆನ್ಸಿಲ್ ....... ಎಷ್ಟು ಕುಷಿ ಈ ಮಕ್ಕಳ ಮುಖದಲ್ಲಿ.... ನೀವೇ ನೋಡಿ. ನಮಗಂತೂ ಕಣ್ಣಿ ನಲ್ಲಿ ನೀರು ಬಂತು. ನಮ್ಮ ಮಕ್ಕಳು ಒಂದು ವಾರದಲ್ಲಿ ಎಷ್ಟು ಪೆನ್ ಮತ್ತು ಪೆನ್ಸಿಲ್ ಗಳನ್ನೂ ಕಳೆದುಕೊಂಡು ಬರುತ್ತಾರೆ... ಅವರಿಗೆ ಬೆಲೆ ಏನು ಎಂಬುದೇ ಗೊತ್ತಿಲ್ಲ....... ಇ ಹಳ್ಳಿ ಮಕ್ಕಳನ್ನು ನೋಡಿ......... 









ಫೋಟೋ ಕೃಪೆ ( ಸುಮತಿ , ಸೂರಜ್, ಅನಂತ, ಗಂಗಾಧರ, ಮಹೇಂದ್ರ, ಗುರುಪ್ರಸಾದ್ )


ಜೈ ಹಿಂದ್ .... ಜೈ ಕರ್ನಾಟಕ !!!!!